Wednesday 25 February 2009

ತಕ್ಕೋ ಎಲ್ ಬಿ ಪದಗಳ್ ಬಾಣ...

'ಪ್ರೊ. ಎಲ್ ಬಿ ಅವರ ಹಾಸ್ಯಮಯ ಮಾತುಗಳನ್ನು ಇನ್ನೊಮ್ಮೆ ಬರೆಯುತ್ತೀನಿ ಎಂದಿದ್ದೆಯಲ್ಲಾ ಬರೆದೆಯಾ?' ಎಂದು ನನ್ನ ಬಹಳಷ್ಟು ಮಿತ್ರರು ಕೇಳುತ್ತಲೇ ಇದ್ದಾರೆ. ಹೀಗಾಗಿ ಬಿಡುವು ಮಾಡಿಕೊಂಡು ಬರೆಯತೊಡಗಿದ್ದೇನೆ.
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದಲ್ಲಿ ಮಠಾಧೀಶರನ್ನೂ, ರಾಜಕಾರಣಿಗಳನ್ನು ಝಾಡಿಸಿ ಅಭೂತಪೂರ್ವ ಭಾಷಣ ಮಾಡಿದ ಡಾ. ಎಲ್. ಬಸವರಾಜು ಅವರು ಸಮ್ಮೇಳನಾಧ್ಯಕ್ಷರ ಭಾಷಣಕ್ಕೇ ಹೊಸ ಗತ್ತು ನೀಡಿದರು. ಆ ಪರಿ ದೂಳು, ಅವ್ಯವಸ್ಥೆ ಏನೇ ಇರಲಿ, ಎಲ್ ಬಿ ಅವರ ಭಾಷಣದಿಂದಾಗಿ ಚಿತ್ರದುರ್ಗ ಸಮ್ಮೇಳನ ಗಮನಾರ್ಹವಾಗಿದ್ದು ಸತ್ಯ. ಹಾಗೆ ನೋಡಿದರೆ, ಮಠಾಧೀಶರು, ರಾಜಕಾರಣಿಗಳನ್ನು ಪ್ರೊ. ಎಲ್ ಬಿ ಅವರು ಝಾಡಿಸಿದ್ದು ತೀರಾ ಅನಿರೀಕ್ಷಿತವಾಗಿರಲಿಲ್ಲ. ಸಮ್ಮೇಳನಕ್ಕೆ ಎರಡು ವಾರ ಮುಂಚೆ ನಾನು ಮೈಸೂರಿನಲ್ಲಿ ಎಲ್ ಬಿ ಅವರನ್ನು ಭೇಟಿಯಾದಾಗಲೂ ಅವರು ಮಠಾಧೀಶರು, ರಾಜಕಾರಣಿಗಳ ವಿರುದ್ಧ ಕೆಂಡ ಕಾರಿದ್ದರು. ಜೊತೆಗೆ ಪೊಳ್ಳು ಮಾತಿನ ಸಾಹಿತಿಗಳನ್ನು ಹಿಗ್ಗಾ-ಮುಗ್ಗಾ ಹಣಿದಿದ್ದರು. 90 ವರ್ಷದ ಆ ಹಿರಿಯ ಜೀವ ಹೀಗೆ ರಾಜಕಾರಣಿಗಳು ಮತ್ತು ಮಠಾಧೀಶರ ವಿರುದ್ಧ ಆಡಿದ ಕಟು ಮಾತುಗಳು ಪ್ರಾಯಶಃ ಮೊದಲು ಪ್ರಕಟವಾಗಿದ್ದು ಸಂಡೇ ಇಂಡಿಯನ್ ನಲ್ಲೇ. (ವಿವರಕ್ಕೆ http://www.thesundayindian.com/kannada/20090208/tryst_basavaraju.asp ಕ್ಲಿಕ್ಕಿಸಿ) ವ್ಯವಸ್ಥೆಯ ವಿರುದ್ಧ ಆ ಪರಿ ಸಿಟ್ಟಿದ್ದ ಅವರೊಂದಿಗಿನ ಸಂದರ್ಶನ ಮಾತ್ರ ತುಂಬಾ ತಮಾಷೆಯಿಂದ ಕೂಡಿತ್ತು. ಅವರ ಚತುರ ಮಾತಿನ ಒಂದೆರಡು ಸ್ಯಾಂಪಲ್ ಇಲ್ಲಿ ನೀಡಿದ್ದೇನೆ:

ಸಂದರ್ಶನದ ಮಧ್ಯೆ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತಾಡ್ತಾ, "ಅದರ ಬಗ್ಗೆ ಮುಂದಿನ ಪ್ರಶ್ನೆ ಕೇಳಬೇಡಿ" ಅಂದುಬಿಟ್ಟರು. 'ಯಾಕೆ ಸರ್?' ಅಂದೆ ಕುತೂಹಲದಿಂದ. " ಹಿಂದೆ ನಮ್ಮ ವಿಕ್ರಮ್ -ಬೇತಾಳ್ ಕತೆಯಲ್ಲಿ ಮುಂದಿನ ಪ್ರಶ್ನೆ ಕೇಳಿದೆಯಾದೊಡೆ ನಿನ್ನ ತಲೆ ಒಡೆದು ಸಾವಿರ ಹೋಳಾಗಲಿ ಅಂತಾನಲ್ಲ ಬೇತಾಳ. ಹಾಗೆ ಶಿಕ್ಷಣದ ಬಗ್ಗೆ ಪ್ರಶ್ನೆ ಮಾಡೋ ಹಾಗೇ ಇಲ್ಲ. ಅಂಥ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟಿದ್ದಾರೆ" ಎಂದರು.
ಹೀಗೇ ಮಾತನಾಡುತ್ತಾ, "ನಮ್ಮ ದೇಶದಲ್ಲಿ ಪ್ರತಿಯೊಂದು ಕೂಡಾ ನಕಲು. ಶಿಕ್ಷಣ, ಆಡಳಿತ, ಕೊನೆಗೆ ಸಾಹಿತ್ಯವನ್ನು ಕೂಡಾ ನಕಲು ಮಾಡೋದೇ?... ಒರಿಜಿನಲ್ ಅಂತ ಏನೂ ಬೇಡವೇ? ಏನ್ ಸುಮ್ನೆ ಕೇಳ್ತಾ ಕುಂತಿದ್ದೀರಲ್ಲಾ ನಾರಾಯಣ ಸ್ವಾಮಿ, ಈ ಪಾಯಿಂಟ್ ಹಾಕ್ಕೊಳಿ.." ಎಂದು ನಕ್ಕರು. ಅದು ಅವರ ಮಾತಿನ ಶೈಲಿ. (ಅದು ಆಗ್ಗೆ ಹಾಸ್ಯದಂತೆ ಕಂಡರೂ, ತಾವು ಹೇಳಿದ್ದನ್ನೆಲ್ಲಾ ಎಲ್ಲರಂತೆ ಬರೆದುಕೊಳ್ಳಿ ಅರ್ಥಾತ್ ನಕಲು ಮಾಡಿಕೊಳ್ಳಿ ಎಂಬ ವ್ಯಂಗ್ಯವೂ ಆ ಮಾತಿನಲ್ಲಿತ್ತು!)
ವರದಕ್ಷಿಣೆ ಪಿಡುಗಿನ ಬಗ್ಗೆ ಅಂತೂ ಕೆಂಡಕಾರಿದರು. "ಅಲ್ಲಾ ಜಾತಿಗೊಬ್ಬರು ಮಠಾಧೀಶರು, ಸ್ವಾಮೀಜಿಗಳು ಇದ್ದಾರಲ್ಲಾ, ಇವರೆಲ್ಲಾ ಆಯಾ ಸಮುದಾಯವರಲ್ಲಿ ವರದಕ್ಷಿಣೆ ತಗೋಳದನ್ನಾ ನಿಷೇಧ ಮಾಡೋಕೆ ಯಾಕೆ ಮುಂದಾಗಬಾರದು. ಜನ ಕಾನೂನು ಪಾಲನೆ ಮಾಡೊಲ್ಲ. ಆದರೆ ಸ್ವಾಮೀಜಿಗಳ ಮಾತು ಕೇಳ್ತಾರೆ..." ಬರ್ಕೊಳಿ ಈ ಪಾಯಿಂಟ್ ನ ಅಂತ ಕಣ್ಣು ಮಿಸುಕುತ್ತಲೇ ಹೇಳಿದರು.
ನಮ್ಮ ವ್ಯವಸ್ಥೆಯ ಬಗ್ಗೆ ಸಾಕಷ್ಟು ಟೀಕೆ ಮಾಡಿದ ಮೇಲೆ, ಮೆಲ್ಲಗೆ ಒಂದು ಪ್ರಶ್ನೆ ಕೇಳಿದರು: "ನಾರಾಯಣ ಸ್ವಾಮಿ, ನಮ್ಮ ದೇಶ, ಸಂಸ್ಕೃತಿ, ಇಲ್ಲಿನ ವ್ಯವಸ್ಥೆಯನ್ನೆಲ್ಲಾ ನಾನು ತುಂಬಾ ಬೈತಾ ಇದೀನಿ ಅಂತ ಅನ್ನಿಸ್ತಾ ಇದೆಯಾ?" ನಾನು 'ಛೇ ಛೇ' ಎಂದೆ. ಮತ್ತೆ ಅದೇ ಪ್ರಶ್ನೆ ಕೇಳಿ, "ನಿಮಗೆ ಹಾಗೆ ಅನಿಸಿದರೆ ನಾನು ವಿವೇಕಸ್ಥ ಅಂತ ಅರ್ಥ" ಎಂದು ನಕ್ಕರು.
ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳನ್ನು ಬಯ್ಯುತ್ತಾ, "ನಾನು ಈ ಮುಂಚೆ ಹೀಗೆ ಬಯ್ದಿದ್ದರೆ, 'ಓ ಇವನ್ನ ನಾವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿಬಿಟ್ಟರೆ ಏನು ಗತಿ ಅಂತ, ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡ್ತಾನೇ ಇರಲಿಲ್ಲವೇನೋ. ಆದರೆ ಈಗ ಅಧ್ಯಕ್ಷನಾಗಿ ನನ್ನ ಹೆಸರು ಅನೌನ್ಸ್ ಮಾಡಿಬಿಟ್ಟಿದ್ದಾರೆ. ಹೀಗಾಗಿ ನಾನು ಧೈರ್ಯದಿಂದ ಟೀಕೆ ಮಾಡ್ಬಹುದು. ಏನಂತೀರಾ ನಾರಾಯಣಸ್ವಾಮಿ?" ಎಂದು ನಕ್ಕರು.
ನನಗೆ ಬೇಕಾದ ಪ್ರಶ್ನೆಗಳನ್ನೆಲ್ಲಾ ಕೇಳಿದ ಮೇಲೆ, ನಿಮ್ಮ ಸುದೀರ್ಘವಾದ ಅಧ್ಯಾಪನ ವೃತ್ತಿಯ ಸ್ವಾರಸ್ಯಕರ ಸಂಗತಿಯೊಂದನ್ನು ಹೇಳಿ ಎಂದೆ. "ಸ್ವಾರಸ್ಯಕರ ಸಂಗತಿಯೇ?, ದೇವರ ದಯೆಯಿಂದ ಯಾವ ವಿದ್ಯಾರ್ಥಿಯೂ ನನ್ನ ಮೇಲೆ ಹಲ್ಲೆ ನಡೆಸಲಿಲ್ಲ. ಅದೇ ಸ್ವಾರಸ್ಯ" ಎಂದು ನಕ್ಕರು. "ಆಗ ಅಧ್ಯಾಪಕರು ಅಂದ್ರೆ ಭಯ-ಭಕ್ತಿ ಇರೋ ವಿದ್ಯಾರ್ಥಿಗಳೂ ಇದ್ದರು. ಈಗಿನ ಹಾಗಲ್ಲ" ಎಂಬ ಮಾತೂ ಸೇರಿತು.
ಸಂದರ್ಶನದ ಕೊನೆಗೆ, "ನಿಮ್ಮ ಸಾಂಸಾರಿಕ ಜೀವನದ ಬಗ್ಗೆ ಹೇಳಿ" ಎಂದೆ. ಈ ಪ್ರಶ್ನೆ ಕೇಳಿದಾಗ ಎಲ್ ಬಿ ಅವರ ಶ್ರೀಮತಿಯವರೂ ಬಳಿಯಲ್ಲೇ ಇದ್ದರು. "ನನ್ನ ಪತ್ನಿ ತುಂಬಾ ಕಷ್ಟ ಪಟ್ಟವಳು. ಸಂಸಾರದ ಭಾರ ನನ್ನ ಮೇಲೆ ಹೊರಿಸಲೇ ಇಲ್ಲ. ಹೀಗಾಗಿ ಸಾಹಿತ್ಯದಲ್ಲಿ ನಾನು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯ ಆಯಿತು. ತಿಂಗಳಿಗೊಂದು ಸಲ ಒಂದು ಸಣ್ಣ ಪೇಪರ್ ನ ಅವಳ ಕೈಗೆ ಕೊಡುತ್ತಿದ್ದೆ, ಅಷ್ಟೆ. (ಪೇಪರ್ ಎಂದರೆ ಸ್ಯಾಲರಿ ಚೆಕ್!). ಅಷ್ಟು ಬಿಟ್ಟರೆ ಸಂಸಾರದ ಕಡೆ ಗಮನವನ್ನೇ ಕೊಡ್ತಿರಲಿಲ್ಲ ನಾನು. ಆದರೆ ಒಂಚೂರೂ ಗೊಣಗಾಡದೆ ಸಂಸಾರ ತೂಗಿಸಿದವಳು ಅವಳು" ಎಂದು ಗಂಭೀರವಾಗೇ ಹೇಳಿದರು. ಮರುಕ್ಷಣವೇ ಮೆಲುದನಿಯಲ್ಲಿ, "ಅವಳು ಎದುರಿಗೆ ಇದ್ದಾಳೆ ಅಂತ ಹೀಗೆ ಹೊಗಳ್ತಾ ಇದೀನಿ. ಇಲ್ದೇ ಹೋದ್ರೆ ನೀವು ಹೋದ ಮೇಲೆ ನನ್ನನ್ನ ಅವ್ಳು ಬಿಡ್ತಾಳೆಯೇ?" ಎಂದರು. ಅವರ ಪತ್ನಿಯೂ ಸೇರಿದಂತೆ ಎಲ್ಲರೂ ನಕ್ಕೆವು. ನನ್ನ ಜೊತೆ ಎಲ್ ಬಿ ಅವರ ಶಿಷ್ಯರಾದ ನಾಗಣ್ಣ ಅವರೂ ಇದ್ದರು. ತರಂಗಕ್ಕೆ ಈ ಮುನ್ನ ಎಲ್ ಬಿ ಸಂದರ್ಶನ ಮಾಡಿದ್ದ ಅವರು ಫೋಟೋ ತೆಗೆಸಲು ತಿಪ್ಪೇಸ್ವಾಮಿ ಅವರ ಜೊತೆ ಬಂದಿದ್ದರು. ಎಲ್ ಬಿ ಮತ್ತು ಅವರ ಶ್ರೀಮತಿಯವರ ಫೋಟೋ ತೆಗೆಯುವುದಾಗಿ ತಿಪ್ಪೇಸ್ವಾಮಿ ಕೋರಿಕೊಂಡರು. ಆಗ ಎಲ್ ಬಿ ಅವರು ತಮ್ಮ ಶ್ರೀಮತಿ ಪಕ್ಕ ಫೋಟೋಗೆ ಪೋಸ್ ಕೊಡಲು ನಿಲ್ಲುತ್ತಾ, "ಈ ಛಾಯಾಗ್ರಾಹಕರು ಎಷ್ಟು ಒಳ್ಳೆ ಕೆಲಸ ಮಾಡ್ತಾರೆ ನೋಡಿ. ಗಂಡ-ಹೆಂಡಿರನ್ನ ಒಂದುಗೂಡಿಸೋ ಕೆಲ್ಸ ಮಾಡ್ತಾರೆ. ನಿಜವಾಗಿಯೂ ಇವರಿಗೆ ನೋಬೆಲ್ ಶಾಂತಿ ಪುರಸ್ಕಾರ ಕೊಡಿಸಬೇಕು" ಎಂಬ ಚಾಟಿ ಎಸೆದರು. ಫೋಟೋ ತೆಗೆವುದು ಮರೆತು ತಿಪ್ಪೇಸ್ವಾಮಿ ನಗುತ್ತಾ ನಿಂತರು.
ವ್ಯವಸ್ಥೆಯ ವಿರುದ್ಧದ ಎಲ್ ಬಿ ಅವರ ಸಿಟ್ಟು, ತಮಾಷೆ, ಮಾತಿನ ಪಂಚ್, ಟೈಮಿಂಗ್, ಜೀವನ ಪ್ರೀತಿ, ಸರಳತೆ ಇವುಗಳಿಗೆ ಮಾರು ಹೋಗದೇ ಇರಲು ಹೇಗೆ ಸಾಧ್ಯ? ಆ ಪ್ರಾಜ್ಞರು ವಯಸ್ಸಿನಲ್ಲಿ ನನಗಿಂತ ಮೂರು ಪಟ್ಟು ಹಿರಿಯರು. ನಾನು ಹುಟ್ಟುವ ಹೊತ್ತಿಗಾಗಲೇ ಅವರು ನಿವೃತ್ತರಾಗಿದ್ದರು. ಅವರೊಂದಿಗೆ ಕಳೆದ ಆ ಎರಡು ಗಂಟೆಗಳು, ನನ್ನ ಅಮೂಲ್ಯ ಕ್ಷಣಗಳು...

Saturday 14 February 2009

ದಾವಣಗೆರೆ ದಿನಗಳು-1

ನಿಗಿನಿಗಿ ಉರಿಯುತ್ತಿರುವ ಕೆಂಡಗಳ ಮೇಲೆ ಸಪಾಟು ಕರಿ ಕಡಪದ ಕಲ್ಲು. ಆಯತಾಕಾರದ ಆ ಕಲ್ಲು ಎಷ್ಟು ದೊಡ್ಡದೆಂದರೆ ಒಂದು ಸಲಕ್ಕೆ 12 ದೋಸೆ ಚೊಯ್ ಅನಿಸಬಹುದು. ಬೆಳಗ್ಗೆ 6ಕ್ಕೇ ಅಂಗಳಕ್ಕಿಳಿದು ಬಲಗೈ ಹಾಗೂ ಎಡಗೈಯಲ್ಲಿ ತಲಾ ಒಂದೊಂದು ಗಂಟೆ ಬ್ಯಾಡ್ಮಿಂಟನ್ ಆಡಿ, ಟೈಮ್ ಇದ್ದರೆ ಒಂದು ಗಂಟೆ ಸ್ವಿಮಿಂಗ್ ಪೂಲ್ ನಲ್ಲಿ ಹಾರಾಡಿ, ಬೆಣ್ಣೆದೋಸೆ ಹೋಟೆಲ್ ನಲ್ಲಿ ಕುಳಿತುಕೊಳ್ಳುವಾಗ್ಗೆ 9.30 ದಾಟಿರುತ್ತಿತ್ತು. ದಾವಣೆಗೆರೆಯ ಡೆಂಟಲ್ ಕಾಲೇಜು ಎದುರಿನ 'ಕೊಟ್ಟೂರೇಶ್ವರ ಬೆಣ್ಣೆದೋಸೆ' ಹೋಟೆಲ್ ಅದು. ಮೈಕೈ ಕಾಲುಗಳೆಲ್ಲಾ ಆಹ್ಲಾದಕರವಾಗಿ ನೋಯುತ್ತಿದ್ದರೆ, ನಿಗಿನಿಗಿ ಕೆಂಡದ ಮೇಲೆ ಚೊಯ್ ಗುಡುವ ಖಾಲಿ, ಬೆಣ್ಣೆ ದೋಸೆಗಳನ್ನು ನೋಡುವುದು ಮತ್ತೊಂದು ಬಗೆಯ ಆಹ್ಲಾದ ತರುತ್ತಿತ್ತು. ಹಾಗೆ ಒಂದು ಸಲಕ್ಕೆ ತಯಾರಾಗುತ್ತಿದ್ದ 12 ದೋಸೆಗಳನ್ನೂ ಆರ್ಡರ್ ಮಾಡಿ ಅನಾಮತ್ತು ಬಾಯಿಗಿಳಿಸುತ್ತಿದ್ದ ದಿನಗಳೂ ಇದ್ದವು. ದೋಸೆಯ ಮೇಲೆ ಮುಕುಟದೋಪಾದಿಯಲ್ಲಿ ಕುಳಿತು, ಶ್ವೇತ ವರ್ಣದಿಂದ ಕಂಗೊಳಿಸುತ್ತಿದ್ದ ಬೆಣ್ಣೆಯಾಗಲೀ, ಲವಂಗಭರಿತ ಕಾಯಿಚಟ್ಟಿ-ಸಪ್ಪೆ ಆಲು ಪಲ್ಯವಾಗಲೀ ನಾನು ಎಂದೂ ಮರೆಯಲಾಗದ ತಿನಿಸುಗಳು. ಕೊಟ್ಟೂರೇಶ್ವರ ಅಲ್ಲದೇ ಹಳೇ ಬಸ್ ಸ್ಟಾಂಡ್ ಎದುರಿನ ಸಣ್ಣ ಮನೆ ಕಂ ಹೋಟಿಲ್ ನಲ್ಲೂ ಬೆಣ್ಣೆ ದೋಸೆ ಸೊಗಸಾಗಿರುತ್ತಿತ್ತು. ಅದರ ರುಚಿ, ಚಟ್ನಿಯ ಸ್ವರೂಪ ಬೇರೊಂದು ಬಗೆ. ಇನ್ನು ನಮ್ಮ ಪ್ರಜಾವಾಣಿ ಕಚೇರಿ ಹತ್ತಿರದ, ಕೆಟಿ ಜಂಬಣ್ಣ ಸರ್ಕಲ್ ಮೂಲೆಯಲ್ಲಿದ್ದ ಅಂಗಡಿಯೊಂದರಲ್ಲಿ ಇಡ್ಲಿ, ವಡೆ, ಪುಳಿಯೋಗರೆ, ಅವಲಕ್ಕಿ, ಚಿತ್ರಾನ್ನ ಸಿಗುತ್ತಿತ್ತು. ಅವಂತೂ ಒಂದಕ್ಕಿಂತ ಒಂದು ರುಚಿಕರವಾಗಿರುತ್ತಿದ್ದವು. ನಾನು ಕಸರತ್ತು ಮಾಡುತ್ತಿದ್ದ ದಿನಗಳಲ್ಲಿ ಅಲ್ಲಿಂದಲೇ ಮುಂಜಾನೆ ಬರೋಬ್ಬರಿ 20 ಇಡ್ಲಿಗಳನ್ನು ಕಟ್ಟಿಸಿಕೊಂಡು ಹೋಗಿ ತಿಂದು, ನೀರು ಕುಡಿದು ಮಲಗಿದೆ ಎಂದರೆ ಏಳುತ್ತಿದ್ದುದು ಮಧ್ಯಾಹ್ನದ ಮೇಲೆಯೇ. ತೀರಾ ಕಡಿಮೆ ಬೆಲೆಗೆ ಗುಣಮಟ್ಟದ, ರುಚಿಕರವಾದ ತಿಂಡಿ ಸಿಗುವುದು ಪ್ರಾಯಶಃ ದಾವಣಗೆರೆಯಲ್ಲಿ ಮಾತ್ರ. ಹಳೇ ದಾವಣಗೆರೆಯ ಗಡಿಯಾರ ಕಂಬದ ಬಳಿ ಕೇವಲ ಒಂದು ರೂಪಾಯಿಗೆ ಬೆಣ್ಣೆ ದೋಸೆ ಈಗಲೂ ಸಿಗುವುದಂತೆ! ವಿದ್ಯಾನಗರದ ಮಹಾತ್ಮಗಾಂಧಿ ಪ್ರತಿಮೆ ಬಳಿ ಗುಡಿಸಲೊಂದರಲ್ಲಿ ದೋಸೆ ಮಾಡುತ್ತಿದ್ದರು. ಪೇಪರ್ ಗಿಂತಲೂ ತೆಳುವಾದ ಆ ದೋಸೆಯ ರುಚಿ ಅಲ್ಲಿ ಬಿಟ್ಟರೆ ಇನ್ನೆಲ್ಲೂ ಸಿಗದು. ಇಡೀ ಒಂದು ದೋಸೆಯನ್ನು ಮಡಿಚಿ ಒಂದೇ ಸಲಕ್ಕೆ ಬಾಯಿಗಿಳಿಸುವುದು ನನಗೆ ಅಭ್ಯಾಸವಾಗಿದ್ದೇ ಅಲ್ಲಿ.
ದಾವಣಗೆರೆಯ ಊಟ ಅಂದರೆ ಅದೊಂಥರ ಉತ್ಸವದ ಹಾಗೆ. ಖಡಕ್ ರೊಟ್ಟಿ, ಚಪಾತಿ, ಜೋಳದ ರೊಟ್ಟಿ ಅದಕ್ಕೆ ಬದನೆಕಾಯಿ ಎಣ್ಣೆಗಾಯಿ, ಕಡ್ಲೆಬೀಜದ ಚಟ್ನಿ- ಅದಕ್ಕೆ ಮೊಸರು, ಸೊಪ್ಪಿನ ಪಲ್ಯ, ಹಸಿ ಸೊಪ್ಪು, ಕಡ್ಲೆಕಾಳು ಕೋಸಂಬರಿ, ಹೋಳಿಗೆ, ಮಾವಿನಹಣ್ಣಿನ ಸೀಕರಣೆ, ಚಿತ್ರಾನ್ನ, ಬಿಳಿ ಅನ್ನ, ಅದಕ್ಕೆ ನುಗ್ಗೇಕಾಯಿ ಸಾಂಬಾರು; ಇನ್ನು ಮೆಣಸಿನಕಾಯಿ ಬಜ್ಜಿ ಇಲ್ಲದೇ ಹೋದರೆ ಅದು ದಾವಣಗೆರೆಯ ಊಟವೇ ಅಲ್ಲ...
ಇನ್ನು ಬೀರೇಶ್ವರ ವ್ಯಾಯಾಮ ಶಾಲೆಯ ಉಸ್ತಾದರೂ, ಮಾಜಿ ಶಾಸಕರೂ ಆದ ಕೆ. ಮಲ್ಲಪ್ಪ ಅವರು ನಿಯಮಿತವಾಗಿ ದ್ವೈಮಾಸಿಕ ಪತ್ರಿಕಾಗೋಷ್ಠಿ ಏರ್ಪಡಿಸುತ್ತಿದ್ದರು. ಕುಸ್ತಿ ಪಂದ್ಯಾವಳಿಯ ಬಗ್ಗೆ ವಿವರ ನೀಡಿ ಅವರು ಸುಮ್ಮನಾಗುತ್ತಿರಲಿಲ್ಲ. ಪಾಕ್-ಚೀನಾ ಗಡಿ ಭಾಗದಲ್ಲಿ ಬಳ್ಳಾರಿ ಜಾಲಿ ಗಿಡಗಳನ್ನು ನೆಡುವ ಮೂಲಕ ದೇಶಕ್ಕೆ ರಕ್ಷಣೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ಕೊಡುತ್ತಿದ್ದರು. ನಾನು ಪತ್ರಿಕಾಗೋಷ್ಠಿಗೆ ಹೋಗಿರುವುದನ್ನು ದೃಢಪಡಿಸಿಕೊಂಡ ಮೇಲಷ್ಟೇ ಮಾತು ಆರಂಭಿಸುತ್ತಿದ್ದರು. ಗೋಷ್ಠಿ ಮುಗಿದ ಮೇಲೆ ಸೊಗಸಾದ ದೇಸಿ ಊಟ. ಯಾವುದೇ ಪತ್ರಿಕಾ ಗೋಷ್ಠಿಯ ಊಟ ತಪ್ಪಿಸಬಹುದಾದರೂ ಮಲ್ಲಪ್ಪ ಅವರ ಗೋಷ್ಠಿಯ ಊಟವನ್ನು ತಪ್ಪಿಸುವಂತಿರಲಿಲ್ಲ. ಅದು ಕುಸ್ತಿಪಟುವೊಬ್ಬ ನಿರಾಕರಿಸಲಾಗದ ಊಟ. ಗಡದ್ದು ಊಟವಾದ ಮೇಲೆ, 'ಚಾಪೆ ಹಾಸಿ ಕೊಡಲೇ, ಸ್ವಲ್ಪ ಹೊತ್ತು ಮಲಗುತ್ತೀರೇ?' ಎಂದು ಕೇಳುತ್ತಿದ್ದರು ಮುಗ್ಧ ಮಲ್ಲಪ್ಪ... ದಾವಣಗೆರೆಯ ದಿನಗಳವು.
ಈಗಲೂ ಊಟದ ವಿಷಯ ಬಂದಾಗಲೆಲ್ಲಾ ದಾವಣಗೆರೆಯ ಮಾತು ತೆಗೆಯದೇ ಹೋದರೆ ನನಗೆ ಸಮಾಧಾನವಾಗುವುದಿಲ್ಲ. ದೆಹಲಿಯಲ್ಲಿ ಒಂದು ವರ್ಷ ಚೋಲೆ ಬಟೂರೆ, ಚೌಮೀನ್ ಗಳ ಮಧ್ಯೆ ನಾನು ಸೊರಗಿ ಹೋಗಿದ್ದಾಗ ದಾವಣಗೆರೆ ತಿಂಡಿ-ತಿನಿಸುಗಳ ಮೇಲಿನ ಗೌರವಾದರ ಇನ್ನಷ್ಟು ಹೆಚ್ಚಾಯಿತು.