Friday 3 April 2009

ಬಿಡುವೇ ಗೊತ್ತಿಲ್ಲದ ಆ ದೈತ್ಯನ ಹೆಸರು ಟಿಆರ್ ಶಿವಪ್ರಸಾದ್

ದಾವಣಗೆರೆ ದಿನಗಳಲ್ಲಿ ಕಚೇರಿಗೆ ಹೋದ ಕೂಡಲೇ ಎಲ್ಲಾ ದಿನಪತ್ರಿಕೆಗಳನ್ನೂ ಮುಂದೆ ಹರಡಿಕೊಂಡು ಒಂದೊಂದನ್ನೇ ವಿಶ್ಲೇಷಿಸುವುದು ನನಗೆ ಅತ್ಯಂತ ಆಪ್ಯಾಯಮಾನವಾದ ಸಂಗತಿಯಾಗಿತ್ತು.
ನನ್ನ ಸಹೋದ್ಯೋಗಿಗಳಾಗಿದ್ದ ಸಚ್ಚಿದಾನಂದ ಮತ್ತು ಡೆಕ್ಕನ್ ಹೆರಾಲ್ಡ್ ನ ಗಿರೀಶ್ ಕೆರೋಡಿ ಅವರೂ ಈ ಕಾರ್ಯದಲ್ಲಿ ಸೇರಿಕೊಳ್ಳುತ್ತಿದ್ದರು. ಒಂದು ದಿನ ವಿಜಯ ಕರ್ನಾಟಕ ಪತ್ರಿಕೆಯನ್ನು ನೋಡಿದ ಕೂಡಲೇ ನಾನು "ಇದೇನಿದು ಆಶ್ಚರ್ಯ, ಇವತ್ತು ಟಿ.ಆರ್. ಶಿವಪ್ರಸಾದನ ಯಾವುದೇ ವಿಶೇಷ ವರದಿ ಬಂದಿಲ್ಲವಲ್ಲಾ?" ಅಂತ ಉದ್ಗಾರ ತೆಗೆದೆ. ಆ ದಿನಗಳಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಶಿವಪ್ರಸಾದನ ಒಂದಾದರೂ ಲೇಖನ ಪ್ರಕಟಗೊಳ್ಳುವುದು ಕಾಯಂ ಆಗಿತ್ತು. ಆತನ ವಿಶೇಷ ವರದಿ ಪ್ರಕಟಗೊಳ್ಳದ ದಿನ ಅಪರೂಪ ಎಂಬಂತಿತ್ತು. ನಾವು ಯಾವುದಾದರೊಂದು ಸ್ಕೂಪ್ ಬಗ್ಗೆ ಚರ್ಚಿಸಿ ಅದನ್ನು ನಾಳೆ ಮಾಡಬೇಕು ಎಂದು ಅಂದುಕೊಳ್ಳುವಷ್ಟರಲ್ಲಿ ನಾಳಿನ ವಿಕೆಯಲ್ಲಿ ಅದು ಶಿವಪ್ರಸಾದ್ ಬೈಲೈನ್ ನಲ್ಲಿ ಪ್ರಕಟಗೊಂಡು ಬಿಟ್ಟಿರುತ್ತಿತ್ತು. ಸದಾ ಓಡಾಡುತ್ಥಾ ಏನಾದರೊಂದು ಮಾಡುತ್ತಲೇ ಇದ್ದ ಆತ ಆಕಾರದಲ್ಲಿ ವಾಮನನಾದರೂ ನಮಗೆಲ್ಲಾ ದೈತ್ಯನಂತೆ ಕಾಣುತ್ತಿದ್ದ.
ನಾನು ಮೊದಲು ಆತನನ್ನು ನೋಡಿದ್ದು ಬೆಂಗಳೂರಿನ ಭಾರತೀಯ ವಿದ್ಯಾ ಭವನದ ನಮ್ಮ ಜರ್ನಲಿಸಂ ತರಗತಿಯಲ್ಲಿ. ನಾನು ಕನ್ನಡ ಮೀಡಿಯಂ, ಆತ ಇಂಗ್ಲಿಷ್ ಮೀಡಿಯಂ. ಆದರೂ ಕನ್ನಡ ಮೀಡಿಯಂ ತರಗತಿಗಳಲ್ಲೇ ಒಳ್ಳೆ ಫ್ಯಾಕಲ್ಟಿ ಇದ್ದಾರೆ ಅಂತ ಆತನ ತರಗತಿ ಮುಗಿಸಿಕೊಂಡು ನಮ್ಮ ತರಗತಿಗೂ ಅಟೆಂಡ್ ಆಗುತ್ತಿದ್ದ. ಕಾಲೇಜು ಹುಡುಗರು ಒಂದು ಕ್ರಿಕೆಟ್ ಟೂರ್ನಿ ಮಾಡಬೇಕು ಎಂದುಕೊಳ್ಳಲಿ, ಒಂದು ಕಲ್ಚರಲ್ ಕಾರ್ಯಕ್ರಮ ಕೊಡಬೇಕು ಎಂದುಕೊಳ್ಳಲಿ ಎಲ್ಲವನ್ನೂ ಮುಂದೆ ನಿಂತು ಅದ್ಭುತವಾಗಿ ಸಂಘಟಿಸುತ್ತಿದ್ದ. ಕಾಲೇಜು ದಿನಗಳಲ್ಲೇ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ನನ್ನ ನುಡಿಚಿತ್ರವೊಂದು ಮುಖಪುಟದಲ್ಲೇ ಪ್ರಕಟಗೊಂಡಿದ್ದನ್ನು ಮುಂಜಾನೆ ತರಗತಿಗೆ ಬಂದಕೂಡಲೇ ಮೊದಲು ನನ್ನ ಗಮನಕ್ಕೆ ತಂದವನು ಆತನೇ. ಕಾಲೇಜು ದಿನಗಳು ಮುಗಿದವು. ನಾನು ಬೆಂಗಳೂರಿನ ಸಮಸ್ತ ಪತ್ರಿಕಾ ಕಚೇರಿಗಳಿಗೆ ಕೆಲಸಕ್ಕಾಗಿ ಅಲೆದಾಡುತ್ತಾ, ಫ್ರೀಲ್ಯಾನ್ಸ್ ಆಗಿ ಬರೆಯುತ್ತಾ ಉಳಿದುಬಿಟ್ಟೆ. ಅವನು ಈ ಟಿವಿಯ ಎಂಟರ್ ಟೇನ್ ಮೆಂಟ್ ಸೆಕ್ಷನ್ ನಲ್ಲಿ ಕೆಲಸ ಗಿಟ್ಟಿಸಿ ಹೈದರಾಬಾದಿಗೆ ಜಿಗಿದ. ಆನಂತರ ವಿಜಯ ಕರ್ನಾಟಕದ ಬಿಜಾಪುರ-ಬಾಗಲಕೋಟೆ ಕರೆಸ್ಪಾಂಡೆಂಟ್ ಆಗಿ ಒಂದಷ್ಟು ವರ್ಷ ಇದ್ದು ನಂತರ ದಾವಣಗೆರೆಗೆ ಬಂದ. ಅದೇ ವೇಳೆ ನಾನೂ ಕೂಡಾ ಪ್ರಜಾವಾಣಿಗೆ ಸೇರಿ ದಾವಣಗೆರೆಗೆ ಬಂದೆ. ಆನಂತರ ವಿಜಯ ಕರ್ನಾಟಕದಲ್ಲಿ ಪ್ರಕಟಗೊಳ್ಳುತ್ತಿದ್ದ ಆತನ ಬೈಲೈನ್ ವರದಿಗಳನ್ನು ಓದುತ್ತ ಓದುತ್ತಲೇ ದಾವಣಗೆರೆಯಲ್ಲಿ ಮೂರೂವರೆ ವರ್ಷಗಳನ್ನು ಕಳೆದುಬಿಟ್ಟೆ. ಈ ಮಧ್ಯೆ ಆತ ವಿಜಯ ಟೈಮ್ಸ್ ಸೇರಿ ಅಲ್ಲೂ ಬರೆಯತೊಡಗಿದ. ನಾನು ಪಿವಿ ಬಿಟ್ಟು 'ಸಂಡೆ ಇಂಡಿಯನ್' ಸೇರಿ ದಿಲ್ಲಿಗೆ ಹಾರಿದೆ. ಆತ ಕೂಡಾ ವಿಕೆ ಬಿಟ್ಟು ಟಿವಿ-9 ಸೇರಿ ದಿಲ್ಲಿಗೆ ಬಂದ. ಕಾಲೇಜು ದಿನಗಳಲ್ಲಿ ಬೆಂಗಳೂರಿನ ವಿಧಾನಸೌಧ, ಎಂಜಿ ರಸ್ತೆ ಸುತ್ತ-ಮುತ್ತ ಅಲೆದಾಡುತ್ತಿದ್ದ ಹಾಗೇ ದಿಲ್ಲಿಯ ಸರೋಜಿನಿ ಮಾರ್ಕೆಟ್, ಪಾರ್ಲಿಮೆಂಟ್ ಭವನದ ಸುತ್ತ-ಮುತ್ತಲೂ ಅಲೆದಾಡತೊಡಗಿದೆವು. 26/11ನ ಮುಂಬೈ ದಾಳಿಯನ್ನು ಆತ ವರದಿ ಮಾಡಿದ ರೀತಿ ಕರ್ನಾಟಕದಲ್ಲೇ ಲೋಕವಿಖ್ಯಾತವಾಯಿತು.
ಪತ್ರಿಕೋದ್ಯಮದ ಕುದುರೆ ಸವಾರಿಯಲ್ಲಿ ಸಿಲುಕಿರುವ ನಾವು ಸದಾ ಟೈಮಿಲ್ಲಾ ಎಂದು ಒದ್ದಾಡುತ್ತಿದ್ದರೆ ಆತ ಮಾತ್ರ ತನ್ನೆಲ್ಲಾ ವರದಿಗಾರಿಕೆಯ ಮಧ್ಯೆಯೇ ಪುಸ್ತಕ, ಬ್ಲಾಗುಗಳನ್ನೂ ನಿಯಮಿತವಾಗಿ ಬರೆಯುವುದನ್ನು ರೂಢಿಸಿಕೊಂಡ. ಈಗಾಗಲೇ ಮೂರು ಬ್ಲಾಗುಗಳನ್ನು ಹೊಂದಿರುವ ಆತ ಆ ನಿಟ್ಟಿನಲ್ಲಿ 'ತ್ರಿವಿಧ ಬ್ಲಾಗೋಹಿ'! ಇದೆಲ್ಲದರ ಮಧ್ಯೆ ಚಲನಚಿತ್ರದಲ್ಲೂ ಆತನ ಅಭಿರುಚಿ ಅಸದೃಶವಾದುದೇ. ಯಾವುದೇ ಒಳ್ಳೆಯ ಸಿನಿಮಾ ಬಂದರೂ ಅದನ್ನು ತಪ್ಪದೇ ನೋಡಿ ನಾವೂ ನೋಡುವಂತೆ ಪ್ರೇರೇಪಿಸುವುದನ್ನು ಆತ ಮರೆಯುವುದಿಲ್ಲ. ಆತನ 'ಸುಭಾಷ್ ಸಾವಿನ ಸುತ್ತಾ' ಮತ್ತು 'ಚಂದ್ರಯಾನ' ಪುಸ್ತಕಗಳು ಉತ್ತಮ ಮಾಹಿತಿ ಹೊತ್ತು ಸಕಾಲದಲ್ಲಿ ಮಾರುಕಟ್ಟೆಗೆ ಬಂದು ಹೆಸರು ಮಾಡಿದವು. 'ಚಂದ್ರಯಾನ' ಪುಸ್ತಕವನ್ನಂತೂ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ದಿಲ್ಲಿಯಲ್ಲಿ ಬಿಡುಗಡೆ ಮಾಡಿ ಬೆನ್ನುತಟ್ಟಿದರು. ನನ್ನ ಕೆಲಸಗಳ ಗಡಿಬಿಡಿಯಲ್ಲಿ ಆ ಪುಸ್ತಕಕ್ಕೊಂದು ಲೇಖನ ಬರೆದುಕೊಡಲೂ ನನಗೆ ಸಾಧ್ಯವಾಗಲಿಲ್ಲ. ಚಂದ್ರಯಾನದ ಬೆನ್ನಿಗೇ ಆತನ ಮತ್ತೊಂದು ಪುಸ್ತಕ ಈಗ ಬಿಡುಗಡೆಗೆ ಸಿದ್ಧವಾಗಿದೆ.
ಏಪ್ರಿಲ್ 13ರ ದಿನದ ಮಹತ್ವ ನಮ್ಮ ತಲೆಮಾರಿನವರಿಗೆ ಅರಿವಿಲ್ಲದಿರಬಹುದು. 1919ರ ಆ ದಿನ ಅಮೃತಸರದ ಜಲಿಯನ್ ವಾಲಾ ಬಾಗ್ ನಲ್ಲಿ ಸೇರಿದ್ದ ಅಮಾಯಕ ಭಾರತೀಯರ ಮೇಲೆ ಬ್ರಿಟಿಷ್ ಸರ್ಕಾರ ನಡೆಸಿದ ಬರ್ಬರ ದಾಳಿಯನ್ನು ಎಂದೂ ಮರೆಯುವಂತಿಲ್ಲ. 1500ಕ್ಕೂ ಹೆಚ್ಚು ಮಂದಿ ಗುಂಡಿಗೆ ಬಲಿಯಾದ ದುರ್ದಿನ ಅದು. ಘಟನೆ ನಡೆದು ಇದೀಗ 90 ವರ್ಷ. ಈ ಸಂಬಂಧ ಶಿವು ಬರೆದ ಟೈಮ್ಲಿ ಪುಸ್ತಕ 'ಜಲಿಯನ್ ವಾಲಾ ಬಾಗ್' ಬರುವ ಏಪ್ರಿಲ್ 13ರ ಸಂಜೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ...
ಬಿಡುವೇ ಗೊತ್ತಿಲ್ಲದ ಆ ದೈತ್ಯನ ಬಗ್ಗೆ ಅಚ್ಚರಿಗೊಳ್ಳುತ್ತಲೇ ಪುಸ್ತಕ ಎದುರು ನೋಡುತ್ತಿದ್ದೇನೆ.

Friday 6 March 2009

ಗಾಂಧೀಜಿಯನ್ನು ನಾವು ಎಂದೋ ಹರಾಜು ಹಾಕಿಬಿಟ್ಟಿದ್ದೇವೆ!

ಮಹಾತ್ಮ ಗಾಂಧಿ ಬಳಸಿದ್ದೆಂದು ಹೇಳಲಾದ ಕೆಲ ವಸ್ತುಗಳ ಹರಾಜು ಪ್ರಕರಣ ಅದೇಕೆ ಅಷ್ಟು ಮಹತ್ವ, ಪ್ರಚಾರ ಪಡೆಯಿತೋ ತಿಳಿಯುತ್ತಿಲ್ಲ. ಮಹಾತ್ಮ ಗಾಂಧಿ ಅವರು ಬಳಸಿದ ಬಟ್ಟಲು, ಚಮಚ, ಗಡಿಯಾರ, ಕನ್ನಡಕ, ಚಪ್ಪಲಿ ಇತ್ಯಾದಿಗಳನ್ನು ಜೇಮ್ಸ್ ಓಟಿಸ್ ಎಂಬಾತ ನ್ಯೂಯಾರ್ಕ್ ನಲ್ಲಿ ಹರಾಜು ಹಾಕುವುದಾಗಿ ಹೇಳಿದ. ಆಗಲೇ ಆ ವಸ್ತುಗಳನ್ನು ಪಡೆದುಕೊಳ್ಳಲು ಭಾರತ ಸರ್ಕಾರ ಪ್ರಯತ್ನಿಸಬೇಕಾದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. (ಅಸಲಿಗೆ ಆ ವಸ್ತುಗಳು ಮಹಾತ್ಮ ಗಾಂಧಿಯದೋ, ಅಲ್ಲವೋ ಎಂಬುದೇ ನಿಶ್ಚಿತವಾಗಿಲ್ಲ. ಹಳೇ ಚಪ್ಪಲಿಯನ್ನು ಕಾಣಿಕೆ ನೀಡುವ ಸಂಪ್ರದಾಯ ನಮ್ಮದಲ್ಲ!).
ಅದಿರಲಿ. ಗಾಂಧೀಜಿ ತಮ್ಮ ಹಲವಾರು ಪ್ರೀತಿ ಪಾತ್ರರಿಗೆ ಅಂತಹ ಕೆಲವು ಕಾಣಿಕೆ ಕೊಡುತ್ತಿದ್ದುದು ನಿಜ. ಹಾಗೆ ಕಾಣಿಕೆ ಪಡೆದವರು ಮತ್ತವರ ವಂಶಜರಿಗೆ ಗಾಂಧಿ ಮೇಲೆ ಅಭಿಮಾನವಿದ್ದಲ್ಲಿ ಅವರು ಖಂಡಿತಾ ಹಣಕ್ಕಾಗಿ ಆ ವಸ್ತುಗಳನ್ನು ಹರಾಜು ಹಾಕಲಾರರು. ಹಾಗೆ ಹರಾಜು ಹಾಕಿದ್ದೇ ಆದಲ್ಲಿ, ಅಂಥವರ ಬಳಿ ಇದ್ದ ಆ ವಸ್ತುಗಳನ್ನು ನಾವು ಸಂಗ್ರಹಿಸಿಟ್ಟುಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಆ ವಸ್ತುಗಳನ್ನು ಹರಾಜು ಹಾಕದೆ ಭಾರತಕ್ಕೆ ಹಿಂದಿರುಗಿಸಬೇಕು ಎಂಬ ಮನವಿಗೆ ಓಟಿಸ್ ಎಂಥಾ ಶರತ್ತು ಹಾಕಿದ ನೋಡಿ: 'ಭಾರತ ತನ್ನ ಬಜೆಟ್ ನಲ್ಲಿ ಬಡವರ ಯೋಗಕ್ಷೇಮಕ್ಕೆ ಹೆಚ್ಚು ಹಣ ಮೀಸಲಿಡಬೇಕು' ಎಂದ. ಇದು ಭಾರತಕ್ಕೆ ಇನ್ನಷ್ಟು ಮುಜಗರ ಉಂಟು ಮಾಡಿತು. ಬಡವರ ಬಗ್ಗೆ ಕಾಗದದ ಮೇಲೆ ಏನೆಲ್ಲಾ ಬೊಂಬಡಿ ಹೊಡೆದರೂ, ಭ್ರಷ್ಟ ಕಾರ್ಯಾಂಗ ಮಧ್ಯವರ್ತಿಗಳ ಲಾಬಿಯನ್ನು ಪೋಷಿಸುತ್ತಲೇ ಬಂದಿರುವ ನಮಗೆ ಇಂಥ ಮುಜಗರ ಆಗಬೇಕಾದ್ದೇ.
ಮಹಾತ್ಮನ ಸ್ಮಾರಕಗಳು ಯಾವುದೋ ದೇಶದಲ್ಲಿ ಹರಾಜಾಗುತ್ತಿದ್ದರೆ ಬೊಬ್ಬೆ ಹೊಡೆಯುವ ನಾವು ಆ ಮಹಾತ್ಮನನ್ನೇ ಯಾವಾಗಲೋ ಹರಾಜು ಹಾಕಿಬಿಟ್ಟಿದ್ದೇವೆ. ಕಂಡಕಂಡಲ್ಲಿ ಗಾಂಧಿ ಪ್ರತಿಮೆಗಳನ್ನು ನಿಲ್ಲಿಸುವುದು, ರಸ್ತೆ, ನಗರಗಳಿಗೆ ಗಾಂಧಿ ಹೆಸರಿಡುವುದೇ ಮಹಾತ್ಮನಿಗೆ ಸಲ್ಲಿಸುವ ಗೌರವ ಎಂಬ ಮೌಢ್ಯದಲ್ಲಿರುವ ನಮಗೆ ಗಾಂಧಿ ತತ್ವಗಳಾವುವೂ ನೆನಪಿಲ್ಲ. 'ಈಚೆಗೆ ಲಗೇ ರಹೋ ಮುನ್ನಾ ಭಾಯ್' ಎಂಬ ಕಮರ್ಷಿಯಲ್ ಸಿನಿಮಾದ ಸಂದರ್ಭ ಬಿಟ್ಟರೆ, ಆಧುನಿಕ ಭಾರತ ಗಾಂಧಿ ಬಗ್ಗೆ ಗಂಭೀರ ಚರ್ಚೆ ಮಾಡಿದ ಉದಾಹರಣೆಯೇ ಇಲ್ಲ.
ಹಾಗೆ ನೋಡಿದರೆ, ಈ ನೆಲದ ಮಹಾಮಹಿಮರ ನೆನಪು ಕೊಡುವ ವಸ್ತುಗಳು, ಸ್ಮಾರಕಗಳ ಬಗ್ಗೆ ನಿಜವಾಗಿ ನಮಗೆ ಆದರ ಇಲ್ಲವೇ ಇಲ್ಲ. ರವೀಂದ್ರನಾಥ ಠಾಕೂರರ ನೋಬೆಲ್ ಪದಕವನ್ನು ಮುತವರ್ಜಿಯಿಂದ ಕಾಪಾಡಿಕೊಳ್ಳಲೂ ನಮಗೆ ಸಾಧ್ಯವಾಗಲಿಲ್ಲ. ಮಹಾ ಮಹಿಮರ ಸ್ಮಾರಕಗಳನ್ನು ಧರ್ಮ, ಮತ-ಪಂಥಗಳ ಹೆಸರಿನಲ್ಲಿ ನಾವು ಹಾಳು ಮಾಡಿಬಿಡುತ್ತೇವೆ ಅಥವಾ ಕಣ್ಣ ಮುಂದೆ ಹಾಳಾಗುತ್ತಿದ್ದರೂ ಜಾಣಕುರುಡು ಪ್ರದರ್ಶಿಸಿಬಿಡುತ್ತೇವೆ. ಇಲ್ಲವೇ ಅಂಥವುಗಳನ್ನು 'ಕಮರ್ಷಿಯಲ್ ಸೆಂಟರ್'ಗಳಾಗಿ ಪರಿವರ್ತಿಸಿ ಜೀವನೋಪಾಯಕ್ಕೆ ಒಂದು ದಾರಿ ಮಾಡಿಕೊಂಡುಬಿಡುತ್ತೇವೆ.
ಗಾಂಧೀಜಿ ಮೇಲೆ ನಿಜಕ್ಕೂ ನಮಗೆ ಅಭಿಮಾನವಿದ್ದಲ್ಲಿ ನಾವು ಸತ್ಯ, ಸರಳತೆ, ಸಹೋದರತ್ವ, ಅಹಿಂಸೆಯಂತಹ ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳಬೇಕಲ್ಲವೇ? ಅದು ಬಿಟ್ಟು ನಿರ್ಜೀವ ವಸ್ತುಗಳನ್ನು ಸಂಗ್ರಹಿಸಿಕೊಳ್ಳುವ ಹುಚ್ಚು ಅಭಿಮಾನ ಏಕೆ?
ವಿಪರ್ಯಾಸ ಏನು ಗೊತ್ತೆ? 'ಮದ್ಯಪಾನ ಮಹಾ ಪಾಪ' ಎಂದ ಆ ಮಹಾತ್ಮನ ವಸ್ತುಗಳು ಕೊನೆಗೂ ನ್ಯೂಯಾರ್ಕ್ ನ ಹರಾಜು ಕಟ್ಟೆಯಿಂದ ಭಾರತಕ್ಕೆ ಬಂದಿದ್ದು ಲಿಕ್ಕರ್ ಹಣದಿಂದ!

Wednesday 25 February 2009

ತಕ್ಕೋ ಎಲ್ ಬಿ ಪದಗಳ್ ಬಾಣ...

'ಪ್ರೊ. ಎಲ್ ಬಿ ಅವರ ಹಾಸ್ಯಮಯ ಮಾತುಗಳನ್ನು ಇನ್ನೊಮ್ಮೆ ಬರೆಯುತ್ತೀನಿ ಎಂದಿದ್ದೆಯಲ್ಲಾ ಬರೆದೆಯಾ?' ಎಂದು ನನ್ನ ಬಹಳಷ್ಟು ಮಿತ್ರರು ಕೇಳುತ್ತಲೇ ಇದ್ದಾರೆ. ಹೀಗಾಗಿ ಬಿಡುವು ಮಾಡಿಕೊಂಡು ಬರೆಯತೊಡಗಿದ್ದೇನೆ.
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದಲ್ಲಿ ಮಠಾಧೀಶರನ್ನೂ, ರಾಜಕಾರಣಿಗಳನ್ನು ಝಾಡಿಸಿ ಅಭೂತಪೂರ್ವ ಭಾಷಣ ಮಾಡಿದ ಡಾ. ಎಲ್. ಬಸವರಾಜು ಅವರು ಸಮ್ಮೇಳನಾಧ್ಯಕ್ಷರ ಭಾಷಣಕ್ಕೇ ಹೊಸ ಗತ್ತು ನೀಡಿದರು. ಆ ಪರಿ ದೂಳು, ಅವ್ಯವಸ್ಥೆ ಏನೇ ಇರಲಿ, ಎಲ್ ಬಿ ಅವರ ಭಾಷಣದಿಂದಾಗಿ ಚಿತ್ರದುರ್ಗ ಸಮ್ಮೇಳನ ಗಮನಾರ್ಹವಾಗಿದ್ದು ಸತ್ಯ. ಹಾಗೆ ನೋಡಿದರೆ, ಮಠಾಧೀಶರು, ರಾಜಕಾರಣಿಗಳನ್ನು ಪ್ರೊ. ಎಲ್ ಬಿ ಅವರು ಝಾಡಿಸಿದ್ದು ತೀರಾ ಅನಿರೀಕ್ಷಿತವಾಗಿರಲಿಲ್ಲ. ಸಮ್ಮೇಳನಕ್ಕೆ ಎರಡು ವಾರ ಮುಂಚೆ ನಾನು ಮೈಸೂರಿನಲ್ಲಿ ಎಲ್ ಬಿ ಅವರನ್ನು ಭೇಟಿಯಾದಾಗಲೂ ಅವರು ಮಠಾಧೀಶರು, ರಾಜಕಾರಣಿಗಳ ವಿರುದ್ಧ ಕೆಂಡ ಕಾರಿದ್ದರು. ಜೊತೆಗೆ ಪೊಳ್ಳು ಮಾತಿನ ಸಾಹಿತಿಗಳನ್ನು ಹಿಗ್ಗಾ-ಮುಗ್ಗಾ ಹಣಿದಿದ್ದರು. 90 ವರ್ಷದ ಆ ಹಿರಿಯ ಜೀವ ಹೀಗೆ ರಾಜಕಾರಣಿಗಳು ಮತ್ತು ಮಠಾಧೀಶರ ವಿರುದ್ಧ ಆಡಿದ ಕಟು ಮಾತುಗಳು ಪ್ರಾಯಶಃ ಮೊದಲು ಪ್ರಕಟವಾಗಿದ್ದು ಸಂಡೇ ಇಂಡಿಯನ್ ನಲ್ಲೇ. (ವಿವರಕ್ಕೆ http://www.thesundayindian.com/kannada/20090208/tryst_basavaraju.asp ಕ್ಲಿಕ್ಕಿಸಿ) ವ್ಯವಸ್ಥೆಯ ವಿರುದ್ಧ ಆ ಪರಿ ಸಿಟ್ಟಿದ್ದ ಅವರೊಂದಿಗಿನ ಸಂದರ್ಶನ ಮಾತ್ರ ತುಂಬಾ ತಮಾಷೆಯಿಂದ ಕೂಡಿತ್ತು. ಅವರ ಚತುರ ಮಾತಿನ ಒಂದೆರಡು ಸ್ಯಾಂಪಲ್ ಇಲ್ಲಿ ನೀಡಿದ್ದೇನೆ:

ಸಂದರ್ಶನದ ಮಧ್ಯೆ ನಮ್ಮ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತಾಡ್ತಾ, "ಅದರ ಬಗ್ಗೆ ಮುಂದಿನ ಪ್ರಶ್ನೆ ಕೇಳಬೇಡಿ" ಅಂದುಬಿಟ್ಟರು. 'ಯಾಕೆ ಸರ್?' ಅಂದೆ ಕುತೂಹಲದಿಂದ. " ಹಿಂದೆ ನಮ್ಮ ವಿಕ್ರಮ್ -ಬೇತಾಳ್ ಕತೆಯಲ್ಲಿ ಮುಂದಿನ ಪ್ರಶ್ನೆ ಕೇಳಿದೆಯಾದೊಡೆ ನಿನ್ನ ತಲೆ ಒಡೆದು ಸಾವಿರ ಹೋಳಾಗಲಿ ಅಂತಾನಲ್ಲ ಬೇತಾಳ. ಹಾಗೆ ಶಿಕ್ಷಣದ ಬಗ್ಗೆ ಪ್ರಶ್ನೆ ಮಾಡೋ ಹಾಗೇ ಇಲ್ಲ. ಅಂಥ ಪರಿಸ್ಥಿತಿ ಸೃಷ್ಟಿ ಮಾಡಿಬಿಟ್ಟಿದ್ದಾರೆ" ಎಂದರು.
ಹೀಗೇ ಮಾತನಾಡುತ್ತಾ, "ನಮ್ಮ ದೇಶದಲ್ಲಿ ಪ್ರತಿಯೊಂದು ಕೂಡಾ ನಕಲು. ಶಿಕ್ಷಣ, ಆಡಳಿತ, ಕೊನೆಗೆ ಸಾಹಿತ್ಯವನ್ನು ಕೂಡಾ ನಕಲು ಮಾಡೋದೇ?... ಒರಿಜಿನಲ್ ಅಂತ ಏನೂ ಬೇಡವೇ? ಏನ್ ಸುಮ್ನೆ ಕೇಳ್ತಾ ಕುಂತಿದ್ದೀರಲ್ಲಾ ನಾರಾಯಣ ಸ್ವಾಮಿ, ಈ ಪಾಯಿಂಟ್ ಹಾಕ್ಕೊಳಿ.." ಎಂದು ನಕ್ಕರು. ಅದು ಅವರ ಮಾತಿನ ಶೈಲಿ. (ಅದು ಆಗ್ಗೆ ಹಾಸ್ಯದಂತೆ ಕಂಡರೂ, ತಾವು ಹೇಳಿದ್ದನ್ನೆಲ್ಲಾ ಎಲ್ಲರಂತೆ ಬರೆದುಕೊಳ್ಳಿ ಅರ್ಥಾತ್ ನಕಲು ಮಾಡಿಕೊಳ್ಳಿ ಎಂಬ ವ್ಯಂಗ್ಯವೂ ಆ ಮಾತಿನಲ್ಲಿತ್ತು!)
ವರದಕ್ಷಿಣೆ ಪಿಡುಗಿನ ಬಗ್ಗೆ ಅಂತೂ ಕೆಂಡಕಾರಿದರು. "ಅಲ್ಲಾ ಜಾತಿಗೊಬ್ಬರು ಮಠಾಧೀಶರು, ಸ್ವಾಮೀಜಿಗಳು ಇದ್ದಾರಲ್ಲಾ, ಇವರೆಲ್ಲಾ ಆಯಾ ಸಮುದಾಯವರಲ್ಲಿ ವರದಕ್ಷಿಣೆ ತಗೋಳದನ್ನಾ ನಿಷೇಧ ಮಾಡೋಕೆ ಯಾಕೆ ಮುಂದಾಗಬಾರದು. ಜನ ಕಾನೂನು ಪಾಲನೆ ಮಾಡೊಲ್ಲ. ಆದರೆ ಸ್ವಾಮೀಜಿಗಳ ಮಾತು ಕೇಳ್ತಾರೆ..." ಬರ್ಕೊಳಿ ಈ ಪಾಯಿಂಟ್ ನ ಅಂತ ಕಣ್ಣು ಮಿಸುಕುತ್ತಲೇ ಹೇಳಿದರು.
ನಮ್ಮ ವ್ಯವಸ್ಥೆಯ ಬಗ್ಗೆ ಸಾಕಷ್ಟು ಟೀಕೆ ಮಾಡಿದ ಮೇಲೆ, ಮೆಲ್ಲಗೆ ಒಂದು ಪ್ರಶ್ನೆ ಕೇಳಿದರು: "ನಾರಾಯಣ ಸ್ವಾಮಿ, ನಮ್ಮ ದೇಶ, ಸಂಸ್ಕೃತಿ, ಇಲ್ಲಿನ ವ್ಯವಸ್ಥೆಯನ್ನೆಲ್ಲಾ ನಾನು ತುಂಬಾ ಬೈತಾ ಇದೀನಿ ಅಂತ ಅನ್ನಿಸ್ತಾ ಇದೆಯಾ?" ನಾನು 'ಛೇ ಛೇ' ಎಂದೆ. ಮತ್ತೆ ಅದೇ ಪ್ರಶ್ನೆ ಕೇಳಿ, "ನಿಮಗೆ ಹಾಗೆ ಅನಿಸಿದರೆ ನಾನು ವಿವೇಕಸ್ಥ ಅಂತ ಅರ್ಥ" ಎಂದು ನಕ್ಕರು.
ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳನ್ನು ಬಯ್ಯುತ್ತಾ, "ನಾನು ಈ ಮುಂಚೆ ಹೀಗೆ ಬಯ್ದಿದ್ದರೆ, 'ಓ ಇವನ್ನ ನಾವು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮಾಡಿಬಿಟ್ಟರೆ ಏನು ಗತಿ ಅಂತ, ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡ್ತಾನೇ ಇರಲಿಲ್ಲವೇನೋ. ಆದರೆ ಈಗ ಅಧ್ಯಕ್ಷನಾಗಿ ನನ್ನ ಹೆಸರು ಅನೌನ್ಸ್ ಮಾಡಿಬಿಟ್ಟಿದ್ದಾರೆ. ಹೀಗಾಗಿ ನಾನು ಧೈರ್ಯದಿಂದ ಟೀಕೆ ಮಾಡ್ಬಹುದು. ಏನಂತೀರಾ ನಾರಾಯಣಸ್ವಾಮಿ?" ಎಂದು ನಕ್ಕರು.
ನನಗೆ ಬೇಕಾದ ಪ್ರಶ್ನೆಗಳನ್ನೆಲ್ಲಾ ಕೇಳಿದ ಮೇಲೆ, ನಿಮ್ಮ ಸುದೀರ್ಘವಾದ ಅಧ್ಯಾಪನ ವೃತ್ತಿಯ ಸ್ವಾರಸ್ಯಕರ ಸಂಗತಿಯೊಂದನ್ನು ಹೇಳಿ ಎಂದೆ. "ಸ್ವಾರಸ್ಯಕರ ಸಂಗತಿಯೇ?, ದೇವರ ದಯೆಯಿಂದ ಯಾವ ವಿದ್ಯಾರ್ಥಿಯೂ ನನ್ನ ಮೇಲೆ ಹಲ್ಲೆ ನಡೆಸಲಿಲ್ಲ. ಅದೇ ಸ್ವಾರಸ್ಯ" ಎಂದು ನಕ್ಕರು. "ಆಗ ಅಧ್ಯಾಪಕರು ಅಂದ್ರೆ ಭಯ-ಭಕ್ತಿ ಇರೋ ವಿದ್ಯಾರ್ಥಿಗಳೂ ಇದ್ದರು. ಈಗಿನ ಹಾಗಲ್ಲ" ಎಂಬ ಮಾತೂ ಸೇರಿತು.
ಸಂದರ್ಶನದ ಕೊನೆಗೆ, "ನಿಮ್ಮ ಸಾಂಸಾರಿಕ ಜೀವನದ ಬಗ್ಗೆ ಹೇಳಿ" ಎಂದೆ. ಈ ಪ್ರಶ್ನೆ ಕೇಳಿದಾಗ ಎಲ್ ಬಿ ಅವರ ಶ್ರೀಮತಿಯವರೂ ಬಳಿಯಲ್ಲೇ ಇದ್ದರು. "ನನ್ನ ಪತ್ನಿ ತುಂಬಾ ಕಷ್ಟ ಪಟ್ಟವಳು. ಸಂಸಾರದ ಭಾರ ನನ್ನ ಮೇಲೆ ಹೊರಿಸಲೇ ಇಲ್ಲ. ಹೀಗಾಗಿ ಸಾಹಿತ್ಯದಲ್ಲಿ ನಾನು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯ ಆಯಿತು. ತಿಂಗಳಿಗೊಂದು ಸಲ ಒಂದು ಸಣ್ಣ ಪೇಪರ್ ನ ಅವಳ ಕೈಗೆ ಕೊಡುತ್ತಿದ್ದೆ, ಅಷ್ಟೆ. (ಪೇಪರ್ ಎಂದರೆ ಸ್ಯಾಲರಿ ಚೆಕ್!). ಅಷ್ಟು ಬಿಟ್ಟರೆ ಸಂಸಾರದ ಕಡೆ ಗಮನವನ್ನೇ ಕೊಡ್ತಿರಲಿಲ್ಲ ನಾನು. ಆದರೆ ಒಂಚೂರೂ ಗೊಣಗಾಡದೆ ಸಂಸಾರ ತೂಗಿಸಿದವಳು ಅವಳು" ಎಂದು ಗಂಭೀರವಾಗೇ ಹೇಳಿದರು. ಮರುಕ್ಷಣವೇ ಮೆಲುದನಿಯಲ್ಲಿ, "ಅವಳು ಎದುರಿಗೆ ಇದ್ದಾಳೆ ಅಂತ ಹೀಗೆ ಹೊಗಳ್ತಾ ಇದೀನಿ. ಇಲ್ದೇ ಹೋದ್ರೆ ನೀವು ಹೋದ ಮೇಲೆ ನನ್ನನ್ನ ಅವ್ಳು ಬಿಡ್ತಾಳೆಯೇ?" ಎಂದರು. ಅವರ ಪತ್ನಿಯೂ ಸೇರಿದಂತೆ ಎಲ್ಲರೂ ನಕ್ಕೆವು. ನನ್ನ ಜೊತೆ ಎಲ್ ಬಿ ಅವರ ಶಿಷ್ಯರಾದ ನಾಗಣ್ಣ ಅವರೂ ಇದ್ದರು. ತರಂಗಕ್ಕೆ ಈ ಮುನ್ನ ಎಲ್ ಬಿ ಸಂದರ್ಶನ ಮಾಡಿದ್ದ ಅವರು ಫೋಟೋ ತೆಗೆಸಲು ತಿಪ್ಪೇಸ್ವಾಮಿ ಅವರ ಜೊತೆ ಬಂದಿದ್ದರು. ಎಲ್ ಬಿ ಮತ್ತು ಅವರ ಶ್ರೀಮತಿಯವರ ಫೋಟೋ ತೆಗೆಯುವುದಾಗಿ ತಿಪ್ಪೇಸ್ವಾಮಿ ಕೋರಿಕೊಂಡರು. ಆಗ ಎಲ್ ಬಿ ಅವರು ತಮ್ಮ ಶ್ರೀಮತಿ ಪಕ್ಕ ಫೋಟೋಗೆ ಪೋಸ್ ಕೊಡಲು ನಿಲ್ಲುತ್ತಾ, "ಈ ಛಾಯಾಗ್ರಾಹಕರು ಎಷ್ಟು ಒಳ್ಳೆ ಕೆಲಸ ಮಾಡ್ತಾರೆ ನೋಡಿ. ಗಂಡ-ಹೆಂಡಿರನ್ನ ಒಂದುಗೂಡಿಸೋ ಕೆಲ್ಸ ಮಾಡ್ತಾರೆ. ನಿಜವಾಗಿಯೂ ಇವರಿಗೆ ನೋಬೆಲ್ ಶಾಂತಿ ಪುರಸ್ಕಾರ ಕೊಡಿಸಬೇಕು" ಎಂಬ ಚಾಟಿ ಎಸೆದರು. ಫೋಟೋ ತೆಗೆವುದು ಮರೆತು ತಿಪ್ಪೇಸ್ವಾಮಿ ನಗುತ್ತಾ ನಿಂತರು.
ವ್ಯವಸ್ಥೆಯ ವಿರುದ್ಧದ ಎಲ್ ಬಿ ಅವರ ಸಿಟ್ಟು, ತಮಾಷೆ, ಮಾತಿನ ಪಂಚ್, ಟೈಮಿಂಗ್, ಜೀವನ ಪ್ರೀತಿ, ಸರಳತೆ ಇವುಗಳಿಗೆ ಮಾರು ಹೋಗದೇ ಇರಲು ಹೇಗೆ ಸಾಧ್ಯ? ಆ ಪ್ರಾಜ್ಞರು ವಯಸ್ಸಿನಲ್ಲಿ ನನಗಿಂತ ಮೂರು ಪಟ್ಟು ಹಿರಿಯರು. ನಾನು ಹುಟ್ಟುವ ಹೊತ್ತಿಗಾಗಲೇ ಅವರು ನಿವೃತ್ತರಾಗಿದ್ದರು. ಅವರೊಂದಿಗೆ ಕಳೆದ ಆ ಎರಡು ಗಂಟೆಗಳು, ನನ್ನ ಅಮೂಲ್ಯ ಕ್ಷಣಗಳು...

Saturday 14 February 2009

ದಾವಣಗೆರೆ ದಿನಗಳು-1

ನಿಗಿನಿಗಿ ಉರಿಯುತ್ತಿರುವ ಕೆಂಡಗಳ ಮೇಲೆ ಸಪಾಟು ಕರಿ ಕಡಪದ ಕಲ್ಲು. ಆಯತಾಕಾರದ ಆ ಕಲ್ಲು ಎಷ್ಟು ದೊಡ್ಡದೆಂದರೆ ಒಂದು ಸಲಕ್ಕೆ 12 ದೋಸೆ ಚೊಯ್ ಅನಿಸಬಹುದು. ಬೆಳಗ್ಗೆ 6ಕ್ಕೇ ಅಂಗಳಕ್ಕಿಳಿದು ಬಲಗೈ ಹಾಗೂ ಎಡಗೈಯಲ್ಲಿ ತಲಾ ಒಂದೊಂದು ಗಂಟೆ ಬ್ಯಾಡ್ಮಿಂಟನ್ ಆಡಿ, ಟೈಮ್ ಇದ್ದರೆ ಒಂದು ಗಂಟೆ ಸ್ವಿಮಿಂಗ್ ಪೂಲ್ ನಲ್ಲಿ ಹಾರಾಡಿ, ಬೆಣ್ಣೆದೋಸೆ ಹೋಟೆಲ್ ನಲ್ಲಿ ಕುಳಿತುಕೊಳ್ಳುವಾಗ್ಗೆ 9.30 ದಾಟಿರುತ್ತಿತ್ತು. ದಾವಣೆಗೆರೆಯ ಡೆಂಟಲ್ ಕಾಲೇಜು ಎದುರಿನ 'ಕೊಟ್ಟೂರೇಶ್ವರ ಬೆಣ್ಣೆದೋಸೆ' ಹೋಟೆಲ್ ಅದು. ಮೈಕೈ ಕಾಲುಗಳೆಲ್ಲಾ ಆಹ್ಲಾದಕರವಾಗಿ ನೋಯುತ್ತಿದ್ದರೆ, ನಿಗಿನಿಗಿ ಕೆಂಡದ ಮೇಲೆ ಚೊಯ್ ಗುಡುವ ಖಾಲಿ, ಬೆಣ್ಣೆ ದೋಸೆಗಳನ್ನು ನೋಡುವುದು ಮತ್ತೊಂದು ಬಗೆಯ ಆಹ್ಲಾದ ತರುತ್ತಿತ್ತು. ಹಾಗೆ ಒಂದು ಸಲಕ್ಕೆ ತಯಾರಾಗುತ್ತಿದ್ದ 12 ದೋಸೆಗಳನ್ನೂ ಆರ್ಡರ್ ಮಾಡಿ ಅನಾಮತ್ತು ಬಾಯಿಗಿಳಿಸುತ್ತಿದ್ದ ದಿನಗಳೂ ಇದ್ದವು. ದೋಸೆಯ ಮೇಲೆ ಮುಕುಟದೋಪಾದಿಯಲ್ಲಿ ಕುಳಿತು, ಶ್ವೇತ ವರ್ಣದಿಂದ ಕಂಗೊಳಿಸುತ್ತಿದ್ದ ಬೆಣ್ಣೆಯಾಗಲೀ, ಲವಂಗಭರಿತ ಕಾಯಿಚಟ್ಟಿ-ಸಪ್ಪೆ ಆಲು ಪಲ್ಯವಾಗಲೀ ನಾನು ಎಂದೂ ಮರೆಯಲಾಗದ ತಿನಿಸುಗಳು. ಕೊಟ್ಟೂರೇಶ್ವರ ಅಲ್ಲದೇ ಹಳೇ ಬಸ್ ಸ್ಟಾಂಡ್ ಎದುರಿನ ಸಣ್ಣ ಮನೆ ಕಂ ಹೋಟಿಲ್ ನಲ್ಲೂ ಬೆಣ್ಣೆ ದೋಸೆ ಸೊಗಸಾಗಿರುತ್ತಿತ್ತು. ಅದರ ರುಚಿ, ಚಟ್ನಿಯ ಸ್ವರೂಪ ಬೇರೊಂದು ಬಗೆ. ಇನ್ನು ನಮ್ಮ ಪ್ರಜಾವಾಣಿ ಕಚೇರಿ ಹತ್ತಿರದ, ಕೆಟಿ ಜಂಬಣ್ಣ ಸರ್ಕಲ್ ಮೂಲೆಯಲ್ಲಿದ್ದ ಅಂಗಡಿಯೊಂದರಲ್ಲಿ ಇಡ್ಲಿ, ವಡೆ, ಪುಳಿಯೋಗರೆ, ಅವಲಕ್ಕಿ, ಚಿತ್ರಾನ್ನ ಸಿಗುತ್ತಿತ್ತು. ಅವಂತೂ ಒಂದಕ್ಕಿಂತ ಒಂದು ರುಚಿಕರವಾಗಿರುತ್ತಿದ್ದವು. ನಾನು ಕಸರತ್ತು ಮಾಡುತ್ತಿದ್ದ ದಿನಗಳಲ್ಲಿ ಅಲ್ಲಿಂದಲೇ ಮುಂಜಾನೆ ಬರೋಬ್ಬರಿ 20 ಇಡ್ಲಿಗಳನ್ನು ಕಟ್ಟಿಸಿಕೊಂಡು ಹೋಗಿ ತಿಂದು, ನೀರು ಕುಡಿದು ಮಲಗಿದೆ ಎಂದರೆ ಏಳುತ್ತಿದ್ದುದು ಮಧ್ಯಾಹ್ನದ ಮೇಲೆಯೇ. ತೀರಾ ಕಡಿಮೆ ಬೆಲೆಗೆ ಗುಣಮಟ್ಟದ, ರುಚಿಕರವಾದ ತಿಂಡಿ ಸಿಗುವುದು ಪ್ರಾಯಶಃ ದಾವಣಗೆರೆಯಲ್ಲಿ ಮಾತ್ರ. ಹಳೇ ದಾವಣಗೆರೆಯ ಗಡಿಯಾರ ಕಂಬದ ಬಳಿ ಕೇವಲ ಒಂದು ರೂಪಾಯಿಗೆ ಬೆಣ್ಣೆ ದೋಸೆ ಈಗಲೂ ಸಿಗುವುದಂತೆ! ವಿದ್ಯಾನಗರದ ಮಹಾತ್ಮಗಾಂಧಿ ಪ್ರತಿಮೆ ಬಳಿ ಗುಡಿಸಲೊಂದರಲ್ಲಿ ದೋಸೆ ಮಾಡುತ್ತಿದ್ದರು. ಪೇಪರ್ ಗಿಂತಲೂ ತೆಳುವಾದ ಆ ದೋಸೆಯ ರುಚಿ ಅಲ್ಲಿ ಬಿಟ್ಟರೆ ಇನ್ನೆಲ್ಲೂ ಸಿಗದು. ಇಡೀ ಒಂದು ದೋಸೆಯನ್ನು ಮಡಿಚಿ ಒಂದೇ ಸಲಕ್ಕೆ ಬಾಯಿಗಿಳಿಸುವುದು ನನಗೆ ಅಭ್ಯಾಸವಾಗಿದ್ದೇ ಅಲ್ಲಿ.
ದಾವಣಗೆರೆಯ ಊಟ ಅಂದರೆ ಅದೊಂಥರ ಉತ್ಸವದ ಹಾಗೆ. ಖಡಕ್ ರೊಟ್ಟಿ, ಚಪಾತಿ, ಜೋಳದ ರೊಟ್ಟಿ ಅದಕ್ಕೆ ಬದನೆಕಾಯಿ ಎಣ್ಣೆಗಾಯಿ, ಕಡ್ಲೆಬೀಜದ ಚಟ್ನಿ- ಅದಕ್ಕೆ ಮೊಸರು, ಸೊಪ್ಪಿನ ಪಲ್ಯ, ಹಸಿ ಸೊಪ್ಪು, ಕಡ್ಲೆಕಾಳು ಕೋಸಂಬರಿ, ಹೋಳಿಗೆ, ಮಾವಿನಹಣ್ಣಿನ ಸೀಕರಣೆ, ಚಿತ್ರಾನ್ನ, ಬಿಳಿ ಅನ್ನ, ಅದಕ್ಕೆ ನುಗ್ಗೇಕಾಯಿ ಸಾಂಬಾರು; ಇನ್ನು ಮೆಣಸಿನಕಾಯಿ ಬಜ್ಜಿ ಇಲ್ಲದೇ ಹೋದರೆ ಅದು ದಾವಣಗೆರೆಯ ಊಟವೇ ಅಲ್ಲ...
ಇನ್ನು ಬೀರೇಶ್ವರ ವ್ಯಾಯಾಮ ಶಾಲೆಯ ಉಸ್ತಾದರೂ, ಮಾಜಿ ಶಾಸಕರೂ ಆದ ಕೆ. ಮಲ್ಲಪ್ಪ ಅವರು ನಿಯಮಿತವಾಗಿ ದ್ವೈಮಾಸಿಕ ಪತ್ರಿಕಾಗೋಷ್ಠಿ ಏರ್ಪಡಿಸುತ್ತಿದ್ದರು. ಕುಸ್ತಿ ಪಂದ್ಯಾವಳಿಯ ಬಗ್ಗೆ ವಿವರ ನೀಡಿ ಅವರು ಸುಮ್ಮನಾಗುತ್ತಿರಲಿಲ್ಲ. ಪಾಕ್-ಚೀನಾ ಗಡಿ ಭಾಗದಲ್ಲಿ ಬಳ್ಳಾರಿ ಜಾಲಿ ಗಿಡಗಳನ್ನು ನೆಡುವ ಮೂಲಕ ದೇಶಕ್ಕೆ ರಕ್ಷಣೆ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲಹೆಯನ್ನೂ ಕೊಡುತ್ತಿದ್ದರು. ನಾನು ಪತ್ರಿಕಾಗೋಷ್ಠಿಗೆ ಹೋಗಿರುವುದನ್ನು ದೃಢಪಡಿಸಿಕೊಂಡ ಮೇಲಷ್ಟೇ ಮಾತು ಆರಂಭಿಸುತ್ತಿದ್ದರು. ಗೋಷ್ಠಿ ಮುಗಿದ ಮೇಲೆ ಸೊಗಸಾದ ದೇಸಿ ಊಟ. ಯಾವುದೇ ಪತ್ರಿಕಾ ಗೋಷ್ಠಿಯ ಊಟ ತಪ್ಪಿಸಬಹುದಾದರೂ ಮಲ್ಲಪ್ಪ ಅವರ ಗೋಷ್ಠಿಯ ಊಟವನ್ನು ತಪ್ಪಿಸುವಂತಿರಲಿಲ್ಲ. ಅದು ಕುಸ್ತಿಪಟುವೊಬ್ಬ ನಿರಾಕರಿಸಲಾಗದ ಊಟ. ಗಡದ್ದು ಊಟವಾದ ಮೇಲೆ, 'ಚಾಪೆ ಹಾಸಿ ಕೊಡಲೇ, ಸ್ವಲ್ಪ ಹೊತ್ತು ಮಲಗುತ್ತೀರೇ?' ಎಂದು ಕೇಳುತ್ತಿದ್ದರು ಮುಗ್ಧ ಮಲ್ಲಪ್ಪ... ದಾವಣಗೆರೆಯ ದಿನಗಳವು.
ಈಗಲೂ ಊಟದ ವಿಷಯ ಬಂದಾಗಲೆಲ್ಲಾ ದಾವಣಗೆರೆಯ ಮಾತು ತೆಗೆಯದೇ ಹೋದರೆ ನನಗೆ ಸಮಾಧಾನವಾಗುವುದಿಲ್ಲ. ದೆಹಲಿಯಲ್ಲಿ ಒಂದು ವರ್ಷ ಚೋಲೆ ಬಟೂರೆ, ಚೌಮೀನ್ ಗಳ ಮಧ್ಯೆ ನಾನು ಸೊರಗಿ ಹೋಗಿದ್ದಾಗ ದಾವಣಗೆರೆ ತಿಂಡಿ-ತಿನಿಸುಗಳ ಮೇಲಿನ ಗೌರವಾದರ ಇನ್ನಷ್ಟು ಹೆಚ್ಚಾಯಿತು.

Thursday 22 January 2009

ವನರಂಗದ ಮೆಟ್ಟಿಲ ಮೇಲೆ ಒದ್ದೆಯಾದ ಕಣ್ಣು, ಮುದ್ದೆಯಾದ ಮನಸು...

Life is Stranger than fiction. ಕಥೆಗಳಲ್ಲಷ್ಟೇ ಸಾಧ್ಯ ಎನಿಸುವಂತಹ ಕೆಲವು ಘಟನೆಗಳು ನಿಜ ಬದುಕಿನಲ್ಲೂ ನಡೆಯುತ್ತಿರುತ್ತವೆ. ಈ ಸಂಗತಿ ಕೇಳಿ:
ನೀವು ಬಿ.ವಿ. ಕಾರಂತ ನಿರ್ದೇಶನದ 'ಗೋಕುಲ ನಿರ್ಗಮನ' ನಾಟಕ ನೋಡಿರಬಹುದು. ಭಾರತೀಯ ರಂಗಭೂಮಿಯ ಮಾಸ್ಟರ್ ಪೀಸ್ ಗಳಲ್ಲಿ ಅಗ್ರ ಸ್ಥಾನ ಅದಕ್ಕೆ. ನಾನು ಆ ದೃಶ್ಯವೈಭವವನ್ನು ಐದಾರು ಬಾರಿ ನೋಡಿದ್ದರೂ ಆ ಸಂಗೀತ ಸದಾ ಕೇಳಬೇಕೆನಿಸುತ್ತದೆ. ಮೊದಲ ಪ್ರಯೋಗದಿಂದ ಇಲ್ಲಿಯವರೆಗೆ ಆ ನಾಟಕದ ಗಾಯನ ಮತ್ತು ಹಾರ್ಮೊನಿಯಂ ನೋಡಿಕೊಳ್ಳುತ್ತಿರುವವರು ಚಂದ್ರಶೇಖರ್ ಆಚಾರ್ ಎಂಬ ರಂಗಕರ್ಮಿ. ಮೈಸೂರಿನಲ್ಲಿ ಅವರದೊಂದು ರಂಗತಂಡವೂ ಇದೆ. ಮಕ್ಕಳ ರಂಗಭೂಮಿಯಲ್ಲಿ ಅವರು ಸಾಕಷ್ಟು ಕೃಷಿ ಮಾಡಿದ್ದಾರೆ. ನಾನು ದೆಹಲಿಯಲ್ಲಿದ್ದಾಗ ಅವರ ಪರಿಚಯ ಆಗಿತ್ತು. ಅನಂತರ ಹಲವು ಬಾರಿ ಭೇಟಿಯಾದಾಗಲೆಲ್ಲಾ 'ಗೋಕುಲ ನಿರ್ಗಮನ' ನಾಟಕದ ಸಿಡಿ ಕೊಡುವಂತೆ ಅವರನ್ನು ಕೇಳಿಕೊಳ್ಳುತ್ತಿದ್ದೆ.
ಇತ್ತೀಚೆಗೆ ನಾನು ಮೈಸೂರಿಗೆ ಹೋಗಬೇಕಾಗಿ ಬಂತು, 75ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ, ಹಿರಿಯರೂ ಆದ ಪ್ರೊ. ಎಲ್. ಬಸವರಾಜು ಅವರ ಸಂದರ್ಶನ ಮಾಡಲು. ಅವರ ಹಾಸ್ಯಮಯ, ಪ್ರೌಢ ಮಾತುಗಳದೇ ಒಂದು ಅನುಭವ. ಅದರ ಬಗ್ಗೆ ಬೇರೆಯೇ ಬರೆಯುತ್ತೇನೆ. ಆದರೆ ಅಂದು ಸಂಜೆ ಆದ ಮತ್ತೊಂದು ಅನುಭವ ಎಂಥವರ ಮನಸ್ಸನ್ನೂ ಕದಡದೇ ಇರದು. ಮೈಸೂರಿಗೆ ಆ ದಿನ ಹೊರಟಿರುವ ವಿಷಯವನ್ನು ನಾನು ಈ ಮೊದಲೇ ಚಂದ್ರಶೇಖರ್ ಅವರಿಗೆ ದೂರವಾಣಿ ಮೂಲಕ ತಿಳಿಸಿ, ಅವರಿಂದ ಸಿಡಿ ಪಡೆಯುವ ಬಗ್ಗೆ ನಿಗದಿಪಡಿಸಿಕೊಂಡಿದ್ದೆ. ಸಂಜೆ 5.30ರ ಹೊತ್ತಿಗೆ ಎಲ್ ಬಿ ಸಂದರ್ಶನ ಮುಗಿಯಿತು. ಕೂಡಲೇ ಚಂದ್ರಶೇಖರ್ ಗೆ ಕರೆ ಮಾಡಿ ರಂಗಾಯಣಕ್ಕೆ ಬರುವುದಾಗಿಯೂ ಅಲ್ಲಿಗೆ ತಾವು ಸಿಡಿ ತರಬೇಕೆಂದೂ ವಿನಂತಿಸಿದೆ. ಸಂಜೆ 6.30ಕ್ಕೆ ಬರುವುದಾಗಿ ಹೇಳಿದರು. ಅಂದು ರಂಗಾಯಣದ ವನರಂಗದಲ್ಲಿ 'ನಟ ನಾರಾಯಣಿ' ನಾಟಕ. ನಾನು ನಾಟಕ ನೋಡುತ್ತಾ ಕುಳಿತೆ. 7 ಘಂಟಯಾದರೂ ಚಂದ್ರಶೇಖರ್ ಬರಲಿಲ್ಲ. ಇನ್ನೂ ತಡವಾದರೆ ನನಗೆ ಬೆಂಗಳೂರಿಗೆ ಹಿಂದಿರುಗಲು ತೊಂದರೆಯಾಗುತ್ತಿತ್ತು. ಹೀಗಾಗಿ ಮತ್ತೆ ಕರೆ ಮಾಡಿದಾಗ, ಅವರು ಹೊರಟಿದ್ದೇನೆ ಎಂದರು. ಅಂತೂ 7.30ರ ಹೊತ್ತಿಗೆ ಬಂದು ಸಿಡಿ ಕೊಟ್ಟರು. 'ತಡವಾಯಿತು ಕ್ಷಮಿಸಿ. ಇವತ್ತು ನನ್ನ ಎರಡನೇ ಮಗು ತೀರಿಕೊಂಡಿತು. ಮಣ್ಣು ಮಾಡಿ ಬರುವುದು ತಡವಾಗಿಬಿಟ್ಟಿತು!!' ಎನ್ನೋದೆ?
ಇದನ್ನು ಓದುವಾಗ ನಿಮಗೇ ಇಷ್ಟೊಂದು ಶಾಕ್ ಆಗಬೇಕಾದರೆ, ಈ ಮಾತನ್ನು ಕೇಳುವಾಗ ನನಗೆ ಅದೆಷ್ಟಾಗಿರಬೇಕು ಊಹಿಸಿ. ಹುಟ್ಟಿದ ಕೆಲವೇ ದಿನಗಳಲ್ಲಿ ಅವರ ಮಗು, ವೈದ್ಯರ ತಪ್ಪಿನಿಂದಾಗಿ ತೀರಿಕೊಂಡಿತಂತೆ. 'ಅಲ್ರೀ, ಸಿಡಿಗೆ ಅಂಥಾ ಅರ್ಜೆಂಟ್ ಏನಿರಲಿಲ್ಲ. ಒಂದು ಮಾತು ಹೀಗೆ ಅಂತ ಹೇಳಿದ್ದರೆ ಆಗಿತ್ತು. ನೀವು ಯಾಕೆ ಈಗ ಬರಲು ಹೋದಿರಿ. ನನ್ನನ್ನ ಯಾಕೆ ಸಂಕಟದಲ್ಲಿ ಸಿಕ್ಕಿಸಿದಿರಿ, ಎಂದು ಅವರಲ್ಲಿ ಪರಿಪರಿಯಾಗಿ ಅವಲತ್ತುಕೊಂಡೆ. 'ನಾನು ಕಲಾವಿದ ಸಾರ್. ನನಗೆ ಆ ಬದ್ಧತೆ ಇದೆ. ಮಗು ತೀರಿದ ಸುದ್ದಿ ತಿಳಿದಾಗಲೂ, ನಾನು ಮೊದಲೇ ಒಪ್ಪಿಕೊಂಡಿದ್ದ 'ರಂಗ ಸಂಗೀತ' ವರ್ಕ್ ಶಾಪ್ ಪೂರ್ಣಗೊಳಿಸಿಯೇ ಹೊರಟಿದ್ದು' ಎಂದರು.
Incidentally, ನನ್ನ 2ನೇ ನಾಟಕದಲ್ಲೂ ಇಂಥ ಒಂದು ದೃಶ್ಯ ಬರೆದಿದ್ದೆ. ಬುದ್ಧನ ಕಾಲದ ಕಥಾವಸ್ತುವಿನ ಆ ನಾಟಕದಲ್ಲಿ ಸೇನಾಪತಿ ಬಂಧುಲಮಲ್ಲನ ಪತ್ನಿ ಮಲ್ಲಿಕಾ ಎಂಬಾಕೆ, ಬುದ್ಧ ಗುರು ಮತ್ತು ಭಿಕ್ಷುಗಳ ಉಪಾಸನೆಯಲ್ಲಿ ತೊಡಗಿರುವಾಗಲೇ ಆಕೆಯ ಪತಿ ಮತ್ತು 10 ಮಂದಿ ಪುತ್ರರು ಕುತಂತ್ರದಿಂದ ಹತ್ಯೆಗೆ ಒಳಗಾದ ಸುದ್ದಿ ಬರುತ್ತದೆ. ಆದರೂ ಆಕೆ ವಿಚಲಿತಳಾಗದೆ ಬೌದ್ಧ ಭಿಕ್ಷುಗಳ ಊಟೋಪಚಾರವೆಲ್ಲಾ ಮುಗಿದ ಮೇಲಷ್ಟೇ ದುರಂತದ ಸಂಗತಿಯನ್ನು ಶಾಂತವಾಗಿ ಹೇಳುತ್ತಾಳೆ. ಇಂಥದೊಂದು ಘಟನೆ ನನ್ನ ಅನುಭವಕ್ಕೆ ಸಾಕ್ಷಾತ್ತಾಗಿ ಬರಲಿದೆ ಎಂದು ನಾನು ಆ ದೃಶ್ಯ ಬರೆಯುವಾಗ್ಗೆ ಊಹಿಸಿರಲಿಲ್ಲ.
ಜಗತ್ತಿನಲ್ಲಿ ಇಂಥವರೂ ಇರುತ್ತಾರೆ!